Friday, April 8, 2022

ಅನಂದ್ ಮಾಲೂರ್- ಕೆ. ಸತ್ಯನಾರಾಯಣ ಅವರ - ಕೋವಿಡ್ ದಿನಚರಿ "/ k Satyanarayana

'ಕೋವಿಡ್' ಪ್ರಪಂಚವನ್ನು ಸಾಕಷ್ಟು ಬದಲಿಸಿದೆ. ಇದರ ಪ್ರಭಾವ ನೂರಾರು ಕವಿತೆ,ಕತೆ, ಕಾದಂಬರಿ, ನಾಟಕ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆಲ್ಲಾ ಒಂದು ತಯಾರಿ ಬೇಕು. ಆದರೆ 'ಕೋವಿಡ್ ದಿನಚರಿ' ಇದಕ್ಕೊಂದು ಅಪವಾದ. ಅಂದಂದಿನ ಸಗಟು ದಿನದ ವಸ್ತುಸ್ಥತಿಯನ್ನು ದಾಖಲಿಸಿರುವುದರಿಂದ ಈ ಕೃತಿಗೊಂದು ಮಹತ್ವದ ತಾವಿದೆ. ಕನ್ನಡದ ಸೃಜನಶೀಲ ಹಾಗೂ ಪ್ರಯೋಗಶೀಲ ಲೇಖಕ ಕೆ.ಸತ್ಯನಾರಾಯಣ ಅವರು ಈ 'ಕೋವಿಡ್ ದಿನಚರಿ'ಯನ್ನು ಬರೆದು, ಪ್ರಕಟಿಸಿದ್ದಾರೆ. ದಿನಚರಿ ಎಂದರೆ ದೈನಂದಿನ ವಿವರಗಳು ಎಂಬುದು ಸಾಮಾನ್ಯಾರ್ಥ. ತಿನ್ನುವುದು,ನಿದ್ರಿಸುವುದು, ಹರಟುವುದು ಇದಿಷ್ಟೇ ದಿನಚರಿ ಎಂದರೆ ಇಲ್ಲನ 'ಕೋವಿಡ್ ದಿನಚರಿ'ಗೆ ಅಂತ ಮಹತ್ವ ಸಿಗಲಾರದು. ಕೃತಿ ಮುಖ್ಯವಾಗಿ ೩ ಅಂಶಗಳ ಆಧಾರದ ಮೇಲೆ ಬೆಳೆದಿದೆ.೧. ನಿರೂಪಕರ ವ್ಯಕ್ತಿಗತ ಜೀವನ. ೨. ನಿರೂಪಕರ ಕುಟುಂಬ ಜೀವನ. ೩ . ಸಮಾಜ/ಲೋಕ ಜೀವನ. '..... ದಿನಚರಿ' ಈ ಮೂರು ನೆಲೆಗಳಲ್ಲೂ ಸಂಚರಿಸುತ್ತದೆ. ಕೋವಿಡ್ ಸಾವುಗಳು ನಿರೂಪಕರನ್ನು ಅಧೀರರನ್ನಾಗಿಸಿದರೆ; ಅವರ ೯೩ರ ಇಳಿವಯಸ್ಸಿನ ಸೋದರತ್ತೆಯ ಜೀವನೋತ್ಸಾಹ ಅವರಲ್ಲಿ ಲವವವಿಕೆಯ ಕಂಪನಗಳನ್ನು ಹುಟ್ಟಿಸುತ್ತದೆ. ಸಾವುಗಳು ಎಲ್ಲರಿಗೂ ದುಃಖವನ್ನೆ ಕೊಡಬೇಕೆಂದಿಲ್ಲ ; ಅದು ಆಸ್ಪತ್ರೆಗಳಿಗೆ, ಔಷಧಿ ಮಾಫಿಯಾಗೆ ಲಾಭದಾಯಕವೂ ಹೌದು! ಲೋಕಸ್ನೇಹಿಯಾದ ಮನುಷ್ಯನಿಗೆ ಏಕಾಂತ ಜೀವನದ ಕಾಲಾಪಾನಿ ಈ ಕೋವಿಡ್ ಕಾಲ. ಮನೆಯೇ ಒಂದು ಕರಿನೀರಿನ ಶಿಕ್ಷೆಯ ತಾವು. ಪೋನಿನ ಮೇಲೆ ಎಷ್ಟು ಮಾತು ಸಾಧ್ಯ? ನಮ್ಮ ಸಾಮಾಜಿಕ ಸಂಬಂಧಗಳು ಮುಕ್ಕಾಲು ವೀಸ ಪಾಲು ವ್ಯಾವಹಾರಿಕ ಸಂಬಂಧಗಳೆನ್ನುವುದನ್ನು ನಿರೂಪಕರು ಘಟನೆಗಳ ಸಾಕ್ಷ್ಯದಿಂದ ಸಾದರಪಡಿಸುತ್ತಾರೆ. ನಮ್ಮ ಮಾತಿನ ಕೃತ್ರಿಮತೆ, ಸಹ ಮಾನವನ ಸಂಕಟ ನಮಗೆ ಕೇವಲ ಸಮಾಚಾರವಷ್ಟೇ! ನಿರ್ಮಮತೆ,ಲೋಕಪ್ರೀತಿರಾಹಿತ್ಯತೆ ಈ 'ಕೋವಿಡ್ ಕಾಲ' ದ ಅತ್ತ್ಯುತ್ತಮ ಉತ್ಪನ್ನವಾಗಿದೆ. ನಿರೂಪಕರು ನಗರದಲ್ಲಿ(ಬೆಂಗಳೂರು) ವಾಸ ಇದ್ದದ್ದರಿಂದ ಸುತ್ತಲಿನ ವಾತಾವರಣವನ್ನು ಈ ಅವಧಿಯಲ್ಲಿ ಚೆನ್ನಾಗಿ ಕಂಡಿರಿಸಿದ್ದಾರೆ. ನಿರ್ಜನ ರಸ್ತೆಗಳು, ಉದ್ಯಾನಗಳು,ಶಾಲಾ ಕಾಲೇಜುಗಳ ಆವರಣ,ಪರಿಚಿತರಿದ್ದರೂ ಅಪರಿಚಿತರಂತೆ ಕಣ್ಣು ತಪ್ಪಿಸಿ ನಡೆಯುವವರು, ಬೀದಿಯ ನಾಯಿ, ಮನೆ ಮುಂದಿನ ಗಿಡಗಳು, ಹೊತ್ತು ಕಳೆಯಲು ಸಿನಿಮಾ, ಸಂಗೀತದ ಆಶ್ರಯ, ವಿದೇಶದಲ್ಲಿರುವ ಮಕ್ಕಳೊಂದಿಗೆ ಫೋನಿನ ಮೇಲೆ ಮಾತು ( ಅಲ್ಲೂ ಕೋವಿಡ್ ಬಗ್ಗೆಯೆ ಮಾತು ಎಂಬುದು ಬಿಡಿಸಿ ಹೇಳಬೇಕಿಲ್ಲ!). ಮನುಷ್ಯನ ಔದಾರ್ಯ, ಸಣ್ಣತನ, ತ್ಯಾಗ,ಅವಕಾಶವಾದಿತನ, ಪ್ರೀತಿ, ದ್ವೇಷ ಈ ಎಲ್ಲ ಮಾನುಷ ವ್ಯಾಪಾರಗಳು ಈ 'ಕೋವಿಡ್ ದಿನಚರಿ'ಯಲ್ಲಿ ಎಂಟ್ರಿಯಾಗಿವೆ. ವಿಷಯದ ಹರಹು ಲೋಕಲ್ ಇಂದ ಗ್ಲೋಬಲ್ ತನಕ ಚಾಚಿಕೊಂಡಿದೆ. ಆಟ,ಪಾಠ, ರಾಜಕೀಯ, ಸಿನಿಮಾ,ರೋಗ,ಸಾವು,ವಲಸೆ,ಸಾಹಿತ್ಯ, ಸಂಗೀತ, ಕುಟುಂಬ,ವ್ಯಾಪಾರ, ಭ್ರಷ್ಟಾಚಾರ,ಧಾರ್ಮಿಕ ಸಾಮರಸ್ಯ,ಹಸಿವು ಹೀಗೆ ಇದು ಬೆಳೆಯುತ್ತಾ ಹೋಗುತ್ತದೆ. ಕನ್ನಡದಲ್ಲಿ ಈ ಕೃತಿ ಒಂದು ಪ್ರಯೋಗಶೀಲ ಸೃಷ್ಟಿ.ಲೇಖಕರು ಇದನ್ನು ಕಾದಂಬರಿ ಜಾತಿಗೆ ಸೇರಿಸಿದ್ದಾರೆ.ವಸ್ತು ಹಾಗೂ ವೈವಿಧ್ಯ ಇದಕ್ಕೆ ಕಾರಣವಿರಬಹುದು. ಘಟನೆಯೊಂದು ಮಾಗಿ ಅದು ಕಾಲಾಂತರದಲ್ಲಿ ಕಲಾ ಅಭಿವ್ಯಕ್ತಿ ಪಡೆಯುವುದು ಒಂದು ಮಾದರಿಯಾದರೆ, ಅಂದಂದಿನ ಘಟನೆಗಳು ಘಟಿತ ಅವಧಿಯಲ್ಲಿಯೇ ಅಭಿವ್ಯಕ್ತಿ ಪಡೆದಿರುವ ಈ 'ಕೋವಿಡ್ ದಿನಚರಿ' ಕಲಾ ಅಭಿವ್ಯಕ್ತಿಗೊಂದು ಹೊಸ ಮಾದರಿಯನ್ನು ನೀಡಿದೆ ಎನಿಸುತ್ತದೆ. ಆನಂದ್ ಗೋಪಾಲ್. ಮಾಲೂರು 0 Comments