Thursday, August 13, 2020

ಮುರಳೀಧರ ಉಪಾಧ್ಯ ಹಿರಿಯಡಕ -- ತುಳು ಸಾಹಿತಿ ಪೊಳಲಿ ಶಿನಪ್ಪ ಹೆಗ್ಡೆ

೧೮೯೦ ರ ಆಗಸ್ಟ್ ೮ರಂದು ಮುದ್ದಣನ ಊರಾದ ನಂದಳಿಕೆಯಲ್ಲಿ ಅಚ್ಚಣ್ಣ ಹೆಗ್ಡೆಯವರ ಮೊದಲ ಮಗನಾಗಿ ಜನನ. ನಾಲ್ಕನೆಯ ತರಗತಿ ವರೆಗೆ ಮಾತ್ರ ವಿದ್ಯಾಭ್ಯಾಸ. ೧೯೦೪ರಲ್ಲಿ ಅನಾಥನಾಗಿ ಮಾತೃಮೂಲದ ಪೊಳಲಿಯ ಅಮುಣಂಜೆಗುತ್ತಿಗೆ ಪಯಣ. ಮಂಗಳೂರಿನ ಸಮೀಪದಲ್ಲಿರುವ ಪೊಳಲಿ ತುಳುನಾಡಿನ ಪ್ರಸಿದ್ಧ, ಸುಂದರ ದೇವೀ ಕ್ಷೇತ್ರಗಳಲ್ಲೊಂದು.ತುಳು ಯಕ್ಷಗಾನ ಕವಿ ಬಡಕ ಬಯಿಲು ಪರಮೇಶ್ವರಯ್ಯರಿಂದಾಗಿ ಸಾಹಿತ್ಯ ಸಂಶೋಧನೆಗಳಲ್ಲಿ ಆಸಕ್ತಿ. ಹೊಟ್ಟೆಪಾಡಿಗಾಗಿ ಅಧ್ಯಾಪನ ಮತ್ತಿತರ ಸಣ್ಣಪುಟ್ಟ ವೃತ್ತಿಗಳು. ದೇವಸ್ಥಾನಗಳ ಉತ್ಸವದ ಸಂದರ್ಭದಲ್ಲಿ ಧ್ವಜಸ್ತಂಭಗಳಿಗೆ ಏರಿಸುವ ಬಟ್ಟೆಯ ಗರುಡನನ್ನು ತಯಾರಿಸುತ್ತಿದ್ದ ಗರುಡಶಿಲ್ಪಿ. ೧೯೨೮ರಲ್ಲಿ ಎಸ್.ಯು. ಪಣಿಯಾಡಿ (ಪಣಿಯಾಡಿ ಶ್ರೀನಿವಾಸ ಉಪಾಧ್ಯ)ಯವರು. ಆರಂಭಿಸಿದ ತುಳು ಚಳವಳದ ಮುಂಚೂಣೇಯ ಕೆಲಸ. ೧೯೩೬ರಿಂದ ೧೯೪೮ ವರೆಗೆ ಪೊಳಲಿಯಲ್ಲಿ ತುಳುವ ಮಹಾಸಭೆಯ ಕಾರ್ಯಾಲಯ.
ಸ್ವಾತಂತ್ರ್ಯ ಯೋಧನಾಗಿ ಮೂರು ಬಾರಿ ಜೈಲುವಾಸ. ಹರಿಜನೋದ್ಧಾರ, ಮದ್ಯಪಾನ ನಿಷೇಧ ಚಳವಳಿಗಳಲ್ಲಿ ಸಕ್ರಿಯ ಪಾತ್ರ.
 ಅನೇಕ ಗಾಂಧೀವಾದಿಗಳಂತೆ ಇವರೂ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದಿಂದ ದೂರ. ಮಂಗಳೂರು ಕೇಂದ್ರ ಮೈದಾನಿನಲ್ಲಿ ಪೋಲೀಸ್ ಲಾಠಿ ಚಾರ್ಚಿನ ಪೆಟ್ಟುಬಿದ್ದು ತಲೆಯಲ್ಲಿ ಉಳಿದ ಗುಳಿ ಹೆಗ್ಡೆಯವರ ಪಾಲಿಗೆ ಉಳಿದ ತಾಮ್ರಪತ್ರ. ಶ್ರೀ ಪೊಳಲಿ ಕ್ಷೇತ್ರದ ಮೊಕ್ತೇಸರರಾಗಿ ಹಲವು ವರ್ಷ ಸೇವೆ. ೧೯೬೬ ಸೆಪ್ಟಂಬರ್ ಮೂರರಂದು ನಿಧನ. ಪೊಳಲಿ ದೆವಿ ರಾಜರಾಜೇಶ್ವರಿ ಭಕ್ತರಿಂದ ಬಣ್ಣಬಣ್ಣದ ಸೀರೆಗಳನ್ನು ಹರಕೆಯಾಗಿ ಸ್ವೀಕರಿಸುವ  ಮೃಣ್ಮಯ ಚೆಲುವೆ. ಪೊಳಲಿಯ ಶೀನಪ್ಪ ಹೆಗ್ಡೆಯವರದು ವರ್ಣರಂಜಿತ ಬದುಕು; ಬಹು ಮುಖ ಆಸಕ್ತಿಗಳು. ಅವರ ಕೃತಿಗಳಲ್ಲಿ ತುಳುನಾಡಿನ ಮಣ್ಣಿನ ’ ಕಮ್ಮೆನ’ (ಪರಿಮಳಾ). ಅಭಿಮಾನಿಗಳಿಗೆ ಅವರು ’ತುಳುವಾಲ’ ಏರ್ಯ  ಲಕ್ಷ್ಮೀನಾರಾಯಣ ಆಳ್ವರು ಅಧ್ಯಕ್ಷರಾಗಿರುವ ಶೀನಪ್ಪ ಹೆಗ್ಡೆ ಜನ್ಮಶತಾಬ್ದ ಸಮಿತಿ ’ತುಳುವಾಲ’ ಎಂಬ ನೆನಪಿನ ಗ್ರಂಥವನ್ನು ಪ್ರಕಟಿಸಿದೆ. (ಪ್ರಧಾನ ಸಂಪಾದಕ-ಅ. ಬಾಲಕೃಷ್ಣಾ ಶೆಟ್ಟಿ ಪೊಳಲಿ)
ಇತಿಹಾಸಕಾರ
೧೯೧೫ರಲ್ಲಿ ತನ್ನ ಇಪ್ಪತ್ತೈದರ ತಾರುಣ್ಯದಲ್ಲಿ ಶೀನಪ್ಪ ಹೆಗ್ಡೆಯವರು ಪ್ರಕಟಿಸಿದ ’ದಕ್ಷಿಣ ಕನ್ನಡ ಜಿಲ್ಲೇಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು ತುಳು ನಾಡಿನ ಇತಿಹಾಸವನ್ನು ಬರೆಯುವ ಮೊದಲ ಪ್ರಯತ್ನವಾಗಿತ್ತು. ಇತಿಹಾಸ ಗ್ರಂಥ ರಚನೆಗೆ ಶಾಸನಗಳನ್ನು ಮಾತ್ರವಲ್ಲದೆ ಕಥನ ಕವನಗಳಂತಿರುವ ತುಳುವಿನ ಜನಪದ ಪುರಾಣಗಳಾದ ಪಾಡ್ದನಗಳನ್ನು. ಗ್ರಾಮಪದ್ಧತಿಯನ್ನು, ಸ್ಥಳಪುರಾಣ, ಸ್ಠಳನಾಮಗಳನ್ನು ಸಾಮಗ್ರಿಗಳಾಗಿ ಬಳಸಿರುವುದು ಈ ಗ್ರಂಥದ ವೈಶಿಷ್ಟ್ಯ. ತುಳುನಾಡಿನ ದೇವಸ್ಥಾನ-ಭೂತಸ್ಥಾನ ಸಂಸ್ಕೃತಿಗಳ ಜನಾಂಗಿಕ ಸ್ಮರಣೆಯ ಸಾರಸಂಗ್ರಹ ಈ ಕೃತಿಯಲ್ಲಿದೆ. ಭೂತಗಳ ನಾಡಿನ ಭೂತಗಳ ನಾಡಿನ ಭೂತಕಾಲದ ಅನ್ವೇಷಣೇಯನ್ನು ಆರಂಭಿಸಿದವರು ಶೀನಪ್ಪ  ಹೆಗ್ಡೆ. ಮುಂದೆ ಈ ದಾರಿಯಲ್ಲಿ ಗಣಪತಿರಾವ್ ಐಗಳ್, ಸಾಲೆತ್ತೂರು, ಗೋವಿಂದ ಪೈ, ಎನ್. ಎಸ್. ಕಿಲ್ಲೆ, ಗುರುರಾಜ್ ಭಟ್ ಮತ್ತಿತರರು ಮುನ್ನಡೇದರು. ತನ್ನ ಇತಿಮಿತಿಗಳ ಹೊರತಾಗಿಯೂ ಐತಿಹಾಸಿಕ  ಮಹತ್ವವಿರುವ ’ ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ’ ಗ್ರಂಥವನ್ನು ೧೯೮೧ರಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ಪುನರ್ ಮುದ್ರಿಸಿದೆ.
 ಶೀನಪ್ಪ ಹೆಗ್ಡೆ ಮತ್ತು ಎನ್. ಎಸ್. ಕಿಲ್ಲೆಯವರ ಜಂಟಿ ಸಾಧನೆಯಾದ’ ’ಪ್ರಾಚೀನ ತುಳುನಾಡು೧೯೫೪ರಲ್ಲಿ ಪ್ರಕಟವಾಯಿತು. ತುಳುನಾಡಿನ ಐತಿಹಾಸ ರಚನೆಗೆ ಲಿಖಿತ ಆಧಾರಗಳನ್ನು ಮಾತ್ರವಲ್ಲದೆ ಅಲಿಖಿತ ಸಾಹಿತ್ಯದಲ್ಲಿರುವ ಸುಳುವುಗಳನ್ನೂ ಬಳಸಿಕೊಳ್ಳಬೇಕೆಂಬುದು ಅವರ ಖಚಿತ ನಿಲುವಾಗಿತ್ತು.
ಮಂ. ಗೋವಿಂದ ಪೈಗಳು ಹೇಳಿದಂತೆ ಶೀನಪ್ಪ ಹೆಗ್ಡೆಯವರು ’ ಮುಂಬಿಗ’ರಾಗಿ ಸತ್ಯಸಂಗ್ರಹಕ್ಕಿಂತ ಮೊದಲಿನ ಸಾರಸಂಗ್ರಹದ, ’ ಕಟ್ಟಡದ ಬಗ್ಗೆ ನೆಲವನ್ನು ಅಗೆವ, ಪಾಯವನ್ನು ಹಾಕುವ’ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದರು.
’ಹೆಗ್ಗಡೇರ  ತುಳುನಾಡು’ ಎಂಬ ಗ್ರಂಥದ ಹಸ್ತಪ್ರತಿಯನ್ನು ೧೯೬೫ರಲ್ಲಿ ಶೀನಪ್ಪ ಹೆಗ್ಡೆಯವರು ಸಿದ್ಧಪಡಿಸಿದರು. ತುಳುನಾಡಿನ ಚರಿತ್ರೆ, ಸಂಸ್ಕಾರಗಳು,  ಕಟ್ಟುಕಟ್ಟಾಳೇಗಳು, ಹಬ್ಬಗಳು ಮತ್ತಿತರ ದಾಖಲೆಗಳನ್ನೊಳಗೊಂಡ ಸಾಂಸ್ಕೃತಿಕ ಇತಿಹಾಸವಾಗಿದ್ದ ಈ ಕೃತಿ ಅವರ ಮಹತ್ವಾಕಾಂಕ್ಷೆಯ ಗ್ರಂಥವಾಗಿತ್ತು. ಈಗ ಈ ಹಸ್ತಪ್ರತಿ ನಾಪತ್ತೆಯಾಗಿದೆ. ಯಾರೋ ಒಬ್ಬರ ಮನೆಯಲ್ಲಿ ಅಡಗಿ ಕುಳಿತಿದೆ.೧೯೪೯ರಲ್ಲಿ ಪ್ರಕಟವಾದ ’ ಮುಳಿನಾಪುರ ಮಹಾತ್ಮೆ’ಯಲ್ಲಿ ಶೀನಪ್ಪ ಹೆಗ್ಡೆಯವರು ಪೊಳಲಿ ಕ್ಷೇತ್ರದ  ಸ್ಥಳಪುರಾಣವನ್ನು ಬರೆದಿದ್ದಾರೆ. ಇದರ ರಚನೆಗೆ ಅವರು ಕದಂಬ ಪುರಾಣ, ದೇವೀ, ಭಾಗವತ, ಸ್ಕಂದಪುರಾಣ, ಬ್ರಹ್ಮಾಂಡ ಪುರಾಣಗಳಿಂದ, ಶಿಲಾಶಾಸನ, ಹಳೆಯ ದಾಖಲೆ ಐತಿಹ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಪೊಳಲಿ ಜಾತ್ರೆಯ ಜಾತ್ರೆಯ ಸಂದರ್ಭದಲ್ಲಿ ನಡೇಯುವ ಚೆಂಡಾಟ ತುಂಬ ಪ್ರಸಿದ್ಧವಾದ ಕ್ರೀಡೋತ್ಸವ. ಈ ಸ್ಥಳಪುರಾಣದೊಳಗಿರುವ ಐತಿಹಾಸದ ಎಳೆಗಳು ಕುತೂಹಲ ಕೆರಳಿಸುತ್ತವೆ.
’ ಶ್ರೀನಿವಾಸ ಲಿಪಿ’ ಶೀನಪ್ಪ ಹೆಗ್ಡೆಯವರ ಇನ್ನೊಂದು ಕನಸು. ಈ ಹೊಸ ಲಿಪಿಯ ಆವಿಷ್ಕಾರಕ್ಕೆ ಅವರಿಗೆ ಸ್ಪೂರ್ತಿ ನೀಡಿದ್ದು ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಿಕ್ಕಿದ ಒಂದು ಸಂಸ್ಕೃತ ಶ್ಲೋಕ. ಇದು ಕೇವಲ ಅಂಕೆಗಳಿಂದ ಮತ್ತು ಕೆಲವು ಸಂಕೇತಗಳಿಂದ ವಿವಿಧ ಭಾಷೆಗಳನ್ನು ಬರೆಯಬಲ್ಲ ಲಿಪಿ.೧೯೧೭ರಲ್ಲಿ ಪ್ರಕಟವಾದ ಈ ಕೃತಿ ೧೯೬೬ರಲ್ಲಿ ಪುನರ್ ಮುದ್ರಣಗೊಂಡಿದೆ.
’ತುಳುವಾಲ ಬಲಿಯೇಂದ್ರ’ (೧೯೨೯)ತುಳುವಿನ ಒಂದು ಪಾಡ್ಧನ-ಜನಪದ ಪುರಾಣ. ಬಲಿಯೇಂದ್ರ ಪಾಡ್ಧನದ ಇತರ ಪಾಠಗಳಿಗಿಂತ ಶೀನಪ್ಪ ಹೆಗ್ಡೆಯವರು ಸಂಗ್ರಹಿಸಿರುವ ಪಾಠ ಸಾಹಿತ್ಯ ಕೃತಿಯಾಗಿ ಚೆನ್ನಾಗಿದೆ. ಜನಪದ ಕೃತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವಾಗ ಲೇಖಕರು ಅನೇಕ ಸೇರ್ಪಡೆಗಳನ್ನು ಮಾಡಿಕೊಂಡಿರಬಹುದು ಎಂಬ ಗುಮಾನಿಯೂ ಇದೆ. ಹತ್ತಾರು ಪುನರ್ ಮುದ್ರಣಗಳನ್ನು ಕಂಡಿರುವ ಈ ಖಂಡಕಾವ್ಯ ತುಳುವಿನ ಜನಪ್ರಿಯ ಕೃತಿಗಳಲ್ಲೊಂದು. 
’ ಮಿತ್ಯನಾರಾಯಣ ಕಥೆ’
’ ಮಿತ್ಯನಾರಾಯಣ ಕಥೆ’(೧೯೩೫)ಶೀನಪ್ಪ ಹೆಗ್ಡೆಯವರು ಸ್ವಾತಂತ್ರ್ಯ ಹೋರಾಟಗಾರರಾಗಿ ಎಸ್. ಯು. ಪಣಿಯಾಡಿ, ಎನ್. ಎಸ್. ಕಿಲ್ಲೆಯವರೊಡನೆ ೧೯೩೦ರಲ್ಲಿ ವೆಲ್ಲೂರು ಜೈಲಿನಲ್ಲಿದ್ದಾಗ ಬರೆದ ಕಾದಂಬರಿ. ಇದು ಕಾದಂಬರಿಯೊ ನೀಳ್ಗತೆಯೊ ಎಂಬ ಕುರಿತು ಭಿನ್ನಾಭಿಪ್ರಾಯಗಳಿವೆ;ಆದರೆ ಇದೊಂದು ಸಾಂಸ್ಕೃತಿಕ ಕಣಜವಾಗಿರುವ ಉತ್ತಮ ಸೃಜನ ಶೀಲ ಕೃತಿ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲ.
ಶೀನಪ್ಪ ಹೆಗ್ಡೆಯವರ ಶೈಲಿಯಲ್ಲಿ ತುಳುಭಾಷೆಯ ಸೇಲೆ-ಗತ್ತು-ಗಮ್ಮತ್ತುಗಳನ್ನು ಹಿಡಿದಿಡುವ ತಾಕತ್ತಿದೆ. ಅವರು ಪುರಾಲಿನ (ಪೊಳಲಿ) ಪರಿಸರದ ಬ್ರಾಹ್ಮಣೇತರರ ತುಳು ವನ್ನು ಮಾತ್ರವಲ್ಲದೆ ಜೈನರ ತುಳುವಿನಂಥ  ಉಪಭಾಷಾ ಪ್ರಭೇದಗಳನ್ನೂ ಚೆನ್ನಾಗಿ ಪ್ರಯೋಗಿಸಿದ್ದಾರೆ. ಈ ಕಾದಂಬರಿ ೧೯೮೯ರಲ್ಲಿ ಪುನರ್ ಮುದ್ರಣಗೊಂಡಿದೆ. ಅ. ಬಾಲಕೃಷ್ಣ ಶೆಟ್ಟಿ ಪೊಳಲಿಯವರು ಭಾಷಾಂತರಿಸಿರುವ ಕನ್ನಡ ’ ಮಿತ್ಯ ನಾರಾಯಣ ಕಥೆ’ ಸದ್ಯದಲ್ಲಿ ಪ್ರಕಟವಾಗಲಿದೆ. ಶೀನಪ್ಪ ಹೆಗ್ಡೆಯವರ ಸಮಗ್ರ ಕೃತಿಗಳನ್ನು ಒಂದು ಸಂಪುಟದಲ್ಲಿ  ಪ್ರಕಟಿಸಲು ಶತಮಾನೋತ್ಸವ ಸಮಿತಿ ಯೋಜಿಸುತ್ತಿದೆ.
 ಶೀನಪ್ಪ ಹೆಗ್ಡೆಯವರು ತೇಜಸ್ವಿಯವರ ’ ಕರ್ವಾಲೊದ ಮಂದಣ್ಣನಂಥ ವ್ಯಕ್ತಿ. ಇಂಥವರ ಪ್ರತಿಭೆಯನ್ನು ಗುರುತಿಸಿ ಗೌರವಿಸುದು, ಅವರ ಅನುಭವದಿಂದ ಪಾಠ ಕಲಿಯುವುದು ವಸಾಹತುಶಾಹಿ ಶಿಕ್ಷಣದಿಂದಾಗಿ ನಾವು ಕಟ್ಟಿಕೊಂಡಿರುವ ಭ್ರಮೆಗಳಿಂದ ಬಿಡುಗಡೆ ಪಡೆಯುವ ಪ್ರಕ್ರಿಯೆಯೂ ಹೌದು. ನಂದಳಿಕೆ ಅಮುಣಂಜೆಗುತ್ತು ಶೀನಪ್ಪ ಹೆಗ್ಡೆಯವರ ಕನಸುಗಳು ಇಂದು ನನಸಾಗುತ್ತಿವೆ. ತುಳುನಾಡೀನ ಸಾಂಸ್ಕೃತಿಕ ಇತಿಹಾಸವನ್ನು ಕುರಿತ ಸಂಶೋಧನೆಗಳು ನಡೆಯುತ್ತಿವೆ; ತುಳುನಿಘಂಟು ತಯಾರಾಗುತ್ತಿದೆ; ಮಂದಾರ ಕೇಶವ ಭಟ್, ಅಮೃತ ಸೋಮೇಶ್ವರ, ಕೆದಂಬಾಡಿ ಜತ್ತಪ್ಪ ರೈ. ಪಾ. ವೆಂ. ಆಚಾರ್ಯ, ವೆಂಕಟರಾಜ ಪುಣೆಂಚಿತ್ತಾಯ, ಸುನೀತಾ ಶೆಟ್ಟಿ ಮತ್ತಿತ ರರು ಪಿತ್ರಾರ್ಜಿತ ಆಸ್ತಿಗೆ, ಸ್ವಯಾರ್ಜಿತ ಸಂಪತ್ತನ್ನು ಸೇರಿ ಸುತ್ತ ತುಳುಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿದ್ದಾರೆ.

ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment