Showing posts with label ವಸಂತಿ ಶೆಟ್ಟಿ ಬ್ರಹ್ಮಾವರ. Show all posts
Showing posts with label ವಸಂತಿ ಶೆಟ್ಟಿ ಬ್ರಹ್ಮಾವರ. Show all posts

Sunday, November 24, 2019

ತುಳು ಕಾದಂಬರಿಗಳು --- ಉಡಲ್ದ ಸಿರಿ , ಪೊದ್ದೊಲು


AC                                            ಹೊಸ ತುಳು ಕಾದಂಬರಿಗಳು
·         ಉಡಲ್ದ ಸಿರಿ ಲೇ : ವಸಂತಿ ಶೆಟ್ಟಿ, ಬ್ರಹ್ಮಾವರ. ಪ್ರ : ವಸುಧಾ ಪ್ರಕಾಶನ,
ಸರಸ್ವತಿ ಬುಕ್ ಸೆಂಟರ್, ಎಸ್.ಎಂ.ಎಸ್.ಪಿ.ಕಾಂಪ್ಲೆಕ್ಸ್, ಉಡುಪಿ - 1.
ಮೊ.ಮುದ್ರಣ : 2004                          ಬೆಲೆ: ರೂ. 60A
·         ಪೂ-ಪೊದ್ದೊಲು ಲೇ: ಬನ್ನಂಜೆ ಬಾಬು ಅಮೀನ್
ಪ್ರ - ಕೆಮ್ಮಲಜೆ ಜಾನಪದ ಪ್ರಕಾಶನ ನಿಟ್ಟೂರು, ಉಡುಪಿ - 576 103
ಮೊ. ಮುದ್ರಣ : 2003                         ಬೆಲೆ: ರೂ. 75
             `ಹೆತ್ತೊಡಲ ಹತ್ತು ಮುಖ' ಕಥಾ ಸಂಕಲನದ  ಲೇಖಕಿ ಶ್ರೀಮತಿ  ವಸಂತಿ ಶೆಟ್ಟಿ ಬ್ರಹ್ಮಾವರ ಅವರ ಮೊದಲ ತುಳು ಕಾದಂಬರಿ `ಉಡಲ್ದ ಸಿರಿ'. ಸತ್ಯನಾರಾಯಣ, ನಿರ್ಮಲ, ಶೇಖರ - ಮೂರು ಪಾತ್ರಗಳ ದಾಂಪತ್ಯ ಜೀವನದ ಚಿತ್ರಣ ಕಾದಂಬರಿಯಲ್ಲಿದೆ. ಮೂವರೂ ಸಹಪಾಠಿಗಳಾಗಿದ್ದವರು ಎಂಬುದೇ ಮೂರು ಸಂಸಾರಗಳ ಕಥೆಯನ್ನು ಜೋಡಿಸುವ ಕೊಂಡಿಯಾಗಿದೆ.
            ಸತ್ಯನಾರಾಯಣ - ಮೋಹಿನಿ ದಂಪತಿಗಳು ಹೆರಿಗೆ ಆಸ್ಪತ್ರೆಯಲ್ಲಿ ಮಗುವನ್ನು ಅದಲು - ಬದಲು ಮಾಡುವ ಕುತಂತ್ರಕ್ಕೆ ಬಲಿಯಾಗುತ್ತಾರೆ. ಸತ್ಯನ ಪತ್ತೇದಾರಿ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ. ಕೊನೆಯಲ್ಲಿ ಸತ್ಯ - ಮೋಹಿನಿ ದಂಪತಿಗಳು ಅನಾಥ ಮಗುವೊಂದನ್ನು ಸಾಕಲು ನಿರ್ಧರಿಸುತ್ತಾರೆ. ಬಾಲ್ಯದಲ್ಲಿ ಮಲ ತಾಯಿಯ ಕಿರುಕುಳ ಅನುಭವಿಸುತ್ತಾ ಬೆಳೆದ ನಿರ್ಮಲಳಿಗೆ ಮದುವೆಯಾದ ಮೇಲೂ ನೆಮ್ಮದಿ ಸಿಗುವುದಿಲ್ಲ. ಆಶಾವಾದಿಯಾದ ನಿರ್ಮಲಾ ಬಾಲವಾಡಿ ಶಾಲೆಯೊಂದನ್ನು ಆರಂಭಿಸಿ, ಸ್ವೋದ್ಯೋಗಿಯಾಗಿ, ಸ್ವಾಭಿಮಾನದಿಂದ ಬದುಕುತ್ತಾಳೆ.
          ಶೇಖರನ ಪತ್ನಿ ಸಿರಿಗರದ ಅಮಲಿನಲ್ಲಿ ತನ್ನ ಪತಿಯನ್ನು , ಮಗುವನ್ನು ಬಿಟ್ಟು ಹೋಗುತ್ತಾಳೆ. ಕಾದಂಬರಿಯಲ್ಲಿ ಶೇಖರನ ಪಾತ್ರ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಅನಿರೀಕ್ಷಿತ ಮುಕ್ತಾಯದ ತಂತ್ರವಿರುವ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿ ರಚನೆಯ ಕಸುಬುಗಾರಿಕೆಯಲ್ಲಿ ಲೇಖಕಿ ಇನ್ನಷ್ಟು ಪಳಗಬೇಕಾಗಿದೆ. ಆಧ್ಯಾಪಿಕೆ ಹಾಗೂ ರಾಜಕಾರಣಿಯಾಗಿರುವ ವಸಂತಿ ಶೆಟ್ಟಿ ಸಮೃದ್ಧ ಜೀವನಾನುಭವ ಇರುವ ಲೇಖಕಿ. ಇವರಿಂದ ಸಂಕೀರ್ಣ ಬದುಕಿನ ಕಲಾತ್ಮಕ ಚಿತ್ರಣ ನೀಡುವ ಇನ್ನಷ್ಟು ಒಳ್ಳೆಯ ಕಾದಂಬರಿಗಳನ್ನು ನಿರೀಕ್ಷಿಸಬಹುದು.
          ಬನ್ನಂಜೆ ಬಾಬು ಅಮೀನ್ ಅವರು ತುಳುನಾಡ ಗರೋಡಿಗಳ ಸಾಂಸ್ಕøತಿಕ ಅಧ್ಯಯನ ಗ್ರಂಥದ ಲೇಖಕರಲ್ಲೊಬ್ಬರಾಗಿ, `ತುಳು ಜಾನಪದ ಆಚರಣೆಗಳು' ಎಂಬ ಪುಸ್ತಕದ ಲೇಖಕರಾಗಿ ಪರಿಚಿತರು. `ಪೂ - ಪೊದ್ದೊಲು' ಕಾದಂಬರಿ ತುಳುವಿನಲ್ಲಿ ಬಾಬು ಅಮೀನರ ಮೊದಲ ಕಾದಂಬರಿ. ಸ್ವಾತಂತ್ರ್ಯ ಪೂರ್ವದ ತುಳುನಾಡಿನ ಹಳ್ಳಿಯೊಂದರ ಎರಡು ಕುಟುಂಬಗಳ ಜೀವನ ಚಿತ್ರಣ ಕಾದಂಬರಿಯಲ್ಲಿದೆ. ಬ್ರಿಟಿಷರು ಆರಂಭಿಸಿದ ಆಧುನಿಕ ಶಿಕ್ಷಣದಿಂದಾಗಿ ಜಾತಿಯ ಏಣಿ ಶ್ರೇಣಿಯಿದ್ದ ತುಳುನಾಡಿನ ಸಾಮಾಜಿಕ ಜೀವನದಲ್ಲಿ ಉಂಟಾದ ಪರಿವರ್ತನೆಗೆ ಕಾದಂಬರಿ ಒತ್ತು ನೀಡುತ್ತದೆ. ಬಂಟ ಸಮಾಜದ ಪಟೇಲ್ ಸುಬ್ಬಯಣ್ಣನ ಮಗ ಲಕ್ಷ್ಮಣ ಹಾಗೂ ಬಿಲ್ಲವ ಸಮಾಜದ ಯೆಂಕಣ್ಣನ ಸೋದರಳಿಯಂದಿರಾದ ಕೋಟಿ-ಚೆನ್ನಯರು ಆಧುನಿಕ ಶಿಕ್ಷಣದ ಲಾಭ ಪಡೆಯುತ್ತಾರೆ. ಲಕ್ಷ್ಮಣ ಊರಿನ ಶಾಲೆಯಲ್ಲಿ ಅಧ್ಯಾಪಕನಾಗುತ್ತಾನೆ. ಕೋಟಿ - ಚೆನ್ನಯರು ಮುಂಬೈಗೆ ಹೋಗಿ ಉದ್ಯೋಗ ಪಡೆದು ಆರ್ಥಿಕವಾಗಿ ಗಟ್ಟಿಯಾಗುತ್ತಾರೆ. ಕಾದಂಬರಿಯ ಕೊನೆಯಲ್ಲಿ ಮಾರಿಬೇನೆಯಿಂದಾಗಿ ಸುಬ್ಬಯಣ್ಣ ಮತ್ತಿತರ ಹಲವರು ಸಾಯುತ್ತಾರೆ. ಜನಪದ ವೈದ್ಯರು ಮಾರಿ ಬೇನೆಯ ಎದುರು ಸೋಲುತ್ತಾರೆ. ಬ್ರಿಟಿಷ್ ವೈದ್ಯರು ದಾಕು ಹಾಕಿ ಮಾರಿ ಬೇನೆಯನ್ನು ನಿಯಂತ್ರಿಸುತ್ತಾರೆ.
          ತುಳುನಾಡಿನ ಜಾತಿ ವ್ಯವಸ್ಥೆ, ಭೂತಾರಾಧನೆ, ಸಿರಿಜಾತ್ರೆ, ಐತಿಹ್ಯಗಳು, ಕಂಬಳ, ಜನಪದ ವೈದ್ಯ, ಮದುವೆಯ ಸಂಪ್ರದಾಯ - ಇವುಗಳ ಸಮೃದ್ಧ ಚಿತ್ರಣವನ್ನು ಕಾದಂಬರಿ ನೀಡುತ್ತದೆ. ಜಾನಪದ ಆಚರಣೆಗಳನ್ನು ದಾಖಲಿಸುವ ಬಾಬು ಅಮೀನರು ಯಥಾಸ್ಥಿತಿಯಾಗದೆ, ಆಧುನಿಕ ಶಿಕ್ಷಣ ತಂದ  ಪರಿವರ್ತನೆಯನ್ನು ಸಮರ್ಥಿಸುತ್ತಾರೆ. ಕಸುಬುಗಾರಿಕೆ ದುರ್ಬಲವಾಗಿರುವ ಕಾದಂಬರಿ ಕೆಲವು ಕಡೆ ಓದುಗರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಇತಿ - ಮಿತಿಯ ಹೊರತಾಗಿ ತನ್ನ ಮೊದಲ ಕಾದಂಬರಿಯನ್ನು ಬನ್ನಂಜೆ ಬಾಬು ಅಮೀನರು ಪಡೆದಿರುವ ಯಶಸ್ಸು ಅಭಿನಂದನಾರ್ಹವಾಗಿದೆ.
·         ಎಂ.ಯು.ಎಚ್.