Sunday, October 31, 2010

TULU NOVEL

ತುಳು ಕಾದಂಬರಿ

ಮುರಳೀಧರ ಉಪಾಧ್ಯ ಹಿರಿಯಡಕ

 ಪೊಳಲಿ ಶೀನಪ್ಪ ಹೆಗ್ಡೆಯವರ 'ಮಿತ್ಯ ನಾರಾಯಣ ಕತೆ', 'ವೆಲ್ಲೂರಿನ ಜೈಲಿನಲ್ಲಿ ಹುಟ್ಟಿದ ತುಳು ಕಾದಂಬರಿ. ಶೀನಪ್ಪ ಹೆಗ್ಡೆಯವರು (1935) ಈ ಕಾದಂಬರಿಯಲ್ಲಿ ಪುರಾಣ, ಚರಿತ್ರೆ ಹಾಗೂ ತನ್ನ ಕಾಲವನ್ನು ಬೆಸೆದಿದ್ದಾರೆ. ಈ ಕಾದಂಬರಿ ನಮ್ಮ ಅಪನಂಬಿಕೆಗಳನ್ನು ಅಮಾನತ್ತಿನಲ್ಲಿಟ್ಟು ಮುಂದಕ್ಕೆ ಕರೆದೊಯ್ಯುತ್ತದೆ. ಇದು ಒಂದು ಶಿಥಿಲ ಬಂಧದ, ಪ್ರಾದೇಶಿಕ, ಐತಿಹಾಸಿಕ ಕಾದಂಬರಿ. ತುಳುನಾಡಿನ ಸಂಸ್ಕೃತಿಯ ಹಲವಾರು ಮುಖಗಳನ್ನು ತೋರಿಸುವುದು ಶೀನಪ್ಪ ಹೆಗ್ಡೆಯವರ ಉದ್ದೇಶ. ವಿಷ್ಣುಶರ್ಮನ 'ಪಂಚತಂತ್ರ'ದಲ್ಲಿ 'ನೇಕಾರ ನಾರಾಯಣ ಆದ ಕತೆ' ಈ ಕೃತಿಗೆ ಪ್ರೇರಣೆ ನೀಡಿದೆ. 'ಪಂಚತಂತ್ರ'ದ ನೇಕಾರ, ಈ ಕೃತಿಯಲ್ಲಿ ನಾರಾಯಣ ಭಟ್ಟನಾಗಿದ್ದಾನೆ. ಈ ಲೋಕದಲ್ಲಿ ಮನುಷ್ಯನಿಂದ ಆಗದೇ ಇರುವುದು ಯಾವುದೂ ಇಲ್ಲ ಎಂಬುದು 'ಪಂಚತಂತ್ರ' ಕತೆಯ ನೀತಿ. ಶೀನಪ್ಪ ಹೆಗ್ಡೆಯವರ ಕಾದಂಬರಿಯಲ್ಲಿ ಸತ್ಯನಾರಾಯಣ ದೇವರು 'ಮಿತ್ಯನಾರಾಯಣ'ನಿಗೆ ಶಿಕ್ಷೆ ಕೊಡುತ್ತಾನೆ. ಅವರು ಹೇಳುವಂತೆ, 'ಸುಳ್ಳು, ಕಪಟ, ಮೋಸದಿಂದ ಎಷ್ಟು ಸಿರಿವಂತಿಕೆ ಬಂದರೂ, ದೇವರು ಅದರ ಫಲವನ್ನು ಅವನಿಗೆ ಕೊಡುತ್ತಾನೆ. ಶೀನಪ್ಪ ಹೆಗ್ಡೆಯವರ ಲೊಟ್ಟೆ ಹೊಡೆಯುವ ನಾರಾಯಣನನ್ನು, ಲೊಟ್ಟೆಯನ್ನು ಸತ್ಯವೆಂದು ನಂಬುವವರನ್ನು ಒಟ್ಟಿಗೆ ತಮಾಷೆ ಮಾಡುತ್ತಾರೆ.
 ಶೀನಪ್ಪ ಹೆಗ್ಡೆಯವರ ಈ ಕಾದಂಬರಿಯಲ್ಲಿ ತುಳುನಾಡಿನ ಜಾತ್ರೆಗಳು, ಸಂತೆಗಳು, ಒಡವೆಗಳು, ಚಿನ್ನಾಭರಣ, ಆಟ, ನಾಗಪೂಜೆ, ಅರಮನೆಯ ದಬರ್ಾರು - ಹೀಗೆ ತುಳುನಾಡಿನ ಚೆಲುವು ತುಂಬಿದೆ. ಹದಿನೈದನೆಯ ಶತಮಾನದ ತುಳುನಾಡಿನ ಬದುಕಿನ ಚಿತ್ರಣವಿರುವ ಈ ಕಾದಂಬರಿಯಲ್ಲಿ ಬ್ರಾಹ್ಮಣ ಯುವಕನೊಬ್ಬ ಜೈನ ಅರಸುಮನೆತನದ ಹೆಣ್ಣನ್ನು ಗಾಂಧರ್ವ ವಿವಾಹವಾಗುವ ಚಿತ್ರಣವಿದೆ. ಅರಮನೆಯ ರಾತ್ರಿಯ ಗುಟ್ಟುಗಳ ಬಗ್ಗೆ, ದೇವಸ್ಥಾನದ ಜಾತ್ರಯ ಬಗ್ಗೆ ಬರೆಯುವ ಹೆಗ್ಡೆಯವರು ತುಳುನಾಡಿನ ಭೂತಸ್ಥಾನ ಸಂಸ್ಕೃತಿಯ ಬಡವರನ್ನು ಮರೆಯುವುದಿಲ್ಲ. ಅರಸರ ಜಾತಿ ರಾಜಕೀಯದಿಂದಾಗಿ ಬಡವರಿಗಾಗುವ ಅನ್ಯಾಯಗಳ ವಿವರವೂ ಈ ಕೃತಿಯಲ್ಲಿದೆ. ಶೀನಪ್ಪ ಹೆಗ್ಡೆಯವರ ಶೈಲಿಯಲ್ಲಿ ತುಳುನಾಡಿನ ವಯ್ಯಾರ, ಗತ್ತ್ತುಗಳನ್ನು ಹಿಡಿಯುವ ತಾಕತ್ತಿದೆ. ಈ ಕಾದಂಬರಿಯಲ್ಲಿ ಅವರು ಅಲ್ಲಲ್ಲಿ ಜೈನರ ತುಳುವನ್ನು ಬಳಸಿದ್ದಾರೆ. ಶೀನಪ್ಪ ಹೆಗ್ಡೆಯವರು ತುಳುನಾಡಿನ ದುಭಾಷಿ ಸಾಹಿತಿಗಳಾಗಿದ್ದರು. ಅವರು ತನ್ನ ಇತಿಹಾಸ ಗ್ರಂಥಗಳನ್ನು ('ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು' - 1915). 'ಪ್ರಾಚೀನ ತುಳುನಾಡು' (ಎನ್. ಎಸ್. ಕಿಲ್ಲೆಯವರ ಜತೆಯಲ್ಲಿ - 1954) ಕನ್ನಡದಲ್ಲಿ ಬರೆದರು. ಕಾದಂಬರಿಯನ್ನು ತುಳುವಿನಲ್ಲಿ ಬರೆದರು.
 ಎಸ್. ಯು. ಪಣಿಯಾಡಿ (ಶ್ರೀನಿವಾಸ ಉಪಾಧ್ಯ ಪಣಿಯಾಡಿ, 1907-1959) ಅವರು ತಾನು 1921ರಲ್ಲಿ ಬರೆದ 'ಸತೀ ಕಮಲೆ'ಯನ್ನು 1936ರಲ್ಲಿ ತನ್ನ 'ತುಳುವ ಸಾಹಿತ್ಯ ಮಾಲೆ'ಯಲ್ಲಿ ಪ್ರಕಟಿಸಿದರು. ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಬರೆದ ಈ ಕಾದಂಬರಿಯಲ್ಲಿ ಗಾಂಧೀಜಿಯ ವಿಚಾರಧಾರೆಯ ದಟ್ಟ ಪ್ರಭಾವವಿದೆ. ಮದುವೆಯ ವ್ಯವಸ್ಥೆಯ ಹೊರಗಿನ ಲೈಂಗಿಕ ಸಂಬಂಧಗಳಿಗೆ ಒಪ್ಪಿಗೆ ಇಲ್ಲದಿರುವುದು, ಸ್ವದೇಶಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ - ಇಲ್ಲೆಲ್ಲ ಗಾಂಧೀಜಿಯ ಚಿಂತನೆಯನ್ನು ಗುರುತಿಸಬಹುದು. ಪಣಿಯಾಡಿಯವರು ಈ ಕಾದಂಬರಿಯನ್ನು ಶಿವಳ್ಳಿ ಬ್ರಾಹ್ಮಣರ ತುಳುವಿನಲ್ಲಿ ಬರೆದಿದ್ದಾರೆ. 'ಸತೀ ಕಮಲೆ' ಒಂದು ಸಾಧಾರಣ ಕಾದಂಬರಿ. ತುಳು ಚಳುವಳಿಯನ್ನು ಆರಂಭಿಸ ಹೊರಟ ಯುವಕನೊಬ್ಬ ಕನಸುಗಳು ಈ ಕಾದಂಬರಿಯಲ್ಲಿವೆ1.
ಗನ್ನು  ಹಿಡಿದು ಹುಲಿಬೇಟೆಯಾಡುತ್ತಿದ್ದ ಕೆದಂಬಾಡಿ ಜತ್ತಪ್ಪ ರೈಗಳು ಗನ್ನು ಬಿಟ್ಟು ಪೆನ್ನು ಹಿಡಿದರು. ಇದರಿಂದ ಕಾಡಿಗೂ ಒಳ್ಳೆಯದಾಯಿತು. ತುಳುನಾಡಿಗೂ ಲಾಭ ವಾಯಿತು. ರೈಗಳು ತುಳುವಿನಲ್ಲಿ ಬರೆದಿರುವ ಶಿವರಾಮ ಕಾರಂತರ 'ಚೋಮನ ದುಡಿ', ನಿರಂಜನರ 'ಚಿರಸ್ಮರಣೆ' ಕಾದಂಬರಿಗಳಿಗೆ ತುಳು ಸಾಹಿತ್ಯದಲ್ಲಿ ಮಹತ್ತ್ವದ ಸ್ಥಾನವಿದೆ. ಚೋಮ ತುಳು ಮಾತನಾಡುವ ಚಂದ ನೋಡಲಿಕ್ಕಾಗಿಯೇ, ತುಳು ಚೋಮನ ದುಡಿ'ಯನ್ನು ಓದಬೇಕು. ಈಗ ಚಲಾವಣೆಯಲ್ಲಿಲ್ಲದ ಅನೇಕ ತುಳು ಶಬ್ದಗಳಿಗೆ ರೈಗಳು ಪುನರ್ಜನ್ಮ ನೀಡುತ್ತಾರೆ. ಕೆದಂಬಾಡಿಯವರದ್ದು ಅಲಿಖಿತ ಪರಂಪರೆಯ ದೊಡ್ಡ ಪ್ರತಿಭೆ. ಆದ್ದರಿಂದ ಅವರು ಅನುವಾದ ಮಾಡುವಾಗ ಅನುವಾದದ ಬೇಲಿಯನ್ನು ದಾಟಿ ರೂಪಾಂತರದ ಮಾರ್ಗ ಹಿಡಿಯುತ್ತಾರೆ. ಕಾರಂತರ ಹಾಗೂ ನಿರಂಜನರ ಕಾದಂಬರಿಗಳಿಗೆ ರೈಗಳು ತುಳುನಾಡಿನ ಪ್ರಾದೇಶಿಕ ರಂಗು ನೀಡಿದ್ದಾರೆ. ತನ್ನ ಬೇಟೆಯ ಸಾಹಿತ್ಯವನ್ನು ಕನ್ನಡದಲ್ಲಿ ಬರೆದಿರುವ ರೈಗಳು ಬೇರೆಯವರ ಕನ್ನಡ ಕೃತಿಗಳನ್ನು ತುಳುವಿಗೆ ಭಾಷಾಂತರ ಮಾಡಿದ್ದಾರೆ.
ಮಹಾಲಿಂಗ ಅವರ 'ನಾಣಜ್ಜೆರ್ ಸುದೆ ತಿಗರ್ಾಯೆರ್' (1994) ಎಂಬತ್ತೆಂಟು ಪುಟಗಳ ಕಿರು ಕಾದಂಬರಿ - ಸ್ವಾತಂತ್ರ್ಯ ಪೂರ್ವದ ತುಳುನಾಡಿನ 'ಕುದ್ರೆಮೂಲೆ' ಎಂಬ ಹಳ್ಳಿ ಈ ಕಾದಂಬರಿಯ ಕ್ರಿಯಾಕೇಂದ್ರ. ಬಡತನದಲ್ಲಿ ಪ್ರೇತಭಟ್ಟನಾಗಿದ್ದ, ಅಡುಗೆ ಭಟ್ಟನಾಗಿದ್ದ ನಾಣಪ್ಪಯ್ಯ ಸ್ವಜಾತಿಯವಳಲ್ಲದ ಸರಸಕ್ಕನನ್ನು ಮದುಯೆಯಾಗಿ, ಬೇಸಾಯಗಾರನಾಗಿ ಕುದ್ರೆಮೂಲೆಯಲ್ಲಿ ನೆಲೆಸಿದ್ದಾರೆ. ಅವರು ಯಕ್ಷಗಾನದ ಅದ್ಭುತ ಪ್ರದರ್ಶನಗಳಲ್ಲಿ, ಗೊಂಬೆಯಾಟದ ಕೈಚಳಕದಲ್ಲಿ ಸಿದ್ಧಹಸ್ತರು, ಹಠಮಾರಿತನದಲ್ಲಿ ಪ್ರಸಿದ್ಧರು. ನಾಣಜ್ಜ ಹೊಳೆಯ ದಾರಿ ಬದಲಾಯಿಸುವ ಕನಸು ಕಂಡು ಕಾರ್ಯಪ್ರವೃತ್ತರಾಗಿರುವುದು ಈ ಕಾದಂಬರಿಯ ಮುಖ್ಯ ಘಟನೆ. ನಾಣಜ್ಜನ ಪ್ರಯತ್ನ ಎರಡು ದಿನದ ಮಟ್ಟಿಗೆ ಯಶಸ್ವಿಯಾಗುತ್ತದೆ; ಹೊಳೆ ದಾರಿ ಬದಲಾಯಿಸುತ್ತದೆ. ಆದರೆ ಗುಡ್ಡ ಜರಿದು, ಅಣೆಕಟ್ಟು ಬಿರಿದು, ಹೊಳೆ ಹಳೆಯ ದಾರಿ ಹಿಡಿದಾಗ ನಾಣಜ್ಜ ಸೋಲೊಪ್ಪಿಕೊಂಡು ಊರು ಬಿಡುತ್ತಾರೆ. ದೇವರುಗಳನ್ನೂ ಬಿಡದ ಜಾತಿಯ ಏಣಿ ಶ್ರೇಣಿಯ ವ್ಯವಸ್ಥೆ, ಧನಿ-ಒಕ್ಕಲು ಪದ್ಧತಿಯ ಅನಿಷ್ಟಗಳು ಇಲ್ಲಿ ಚಿತ್ರಣಗೊಂಡಿವೆ. ಮಹಾಲಿಂಗರ ಶೈಲಿಯಲ್ಲಿ ಕಾವ್ಯ ಸ್ಪರ್ಶಕ್ಕಿಂತ ಹಾಸ್ಯಸ್ಪರ್ಶ ಜಾಸ್ತಿ. ಈ ತುಳು ಕಾದಂಬರಿಯಲ್ಲಿ ಪ್ರಾದೇಶಿಕತೆ, ಉಗ್ರ ರಾಷ್ಟ್ರೀಯತೆಗೆ ತನ್ನದೇ ರೀತಿಯಲ್ಲಿ ಉತ್ತರ ಕೊಡುತ್ತದೆ ಅನ್ನಿಸುತ್ತದೆ. ಇಲ್ಲಿ ಭಾರತ, ಮದ್ರಾಸು ಸಂಸ್ಥಾನ, ಕನರ್ಾಟಕ ರಾಜ್ಯ ಇವುಗಳ ನೆರಳೂ ಕಾಣಿಸುವುದಿಲ್ಲ. ಇಲ್ಲಿರುವುದು 'ಎಲ್ಲದರಲ್ಲೂ ಒಂದು ಸಂಗೀತ ಬೇಕು' ಎನ್ನುವ ಕನಸುಗಾರ 'ನಾಣಜ್ಜ' ಯಕ್ಷಗಾನದ ಅದ್ಭುತ ಲೋಕ ಮತ್ತು ಹೊಳೆ.
'ಕುದುರುದ ಕೇದಗೆ' (1994) ಎಂ. ಜಾನಕಿ ಬ್ರಹ್ಮಾವರ ಅವರ ಚೊಚ್ಚಲ ತುಳು ಕಾದಂಬರಿ. ತುಳುನಾಡಿನ ಹಳ್ಳಿಯೊಂದರ ದಲಿತರ ಅಸಹಾಯಕತೆಯನ್ನು ಅನಾವರಣಗೊಳಿಸುವ ಈ ಕಾದಂಬರಿಯು ತನ್ನ ಕಲಾತ್ಮಕ ಕುಸುರಿ ಕೆಲಸದಿಂದ ಗಮನ ಸೆಳೆಯುತ್ತದೆ. ಗ್ರಾಮೀಣ ಸಮಾಜದ ದಲಿತರ ಸ್ಥಿತಗತಿ 'ಕುದುರುದ ಕೇದಗೆ'ಯ ದೃಷ್ಟಿಕೇಂದ್ರವಾಗಿದೆ. ಬಿಲ್ಲವ ಜಾತಿಯ ಯುವಕ ಶಂಕರನಿಗೆ ದಲಿತರ ಕುರಿತು ಪ್ರಾಮಾಣಿಕವಾದ ಸಹಾನುಭೂತಿ ಇದೆ. ದಲಿತ ವಾಸುವಿನ ಹೆಣ ಹೊರಲು ಶಂಕರನ ಸ್ವಜಾತಿಯವರು ನಿರಾಕರಿಸುತ್ತಾರೆ. ವಾಸುವಿನ ಸಾವಿಗೆ ದಲಿತರ ಮೂಢನಂಬಿಕೆಯೂ ಕಾರಣವಾಗಿದೆ. ಯಕ್ಷಗಾನ ಪ್ರದರ್ಶನದಂದು ನಡೆಯುವ ಗೂಂಡಾಗಳ ಆಕ್ರಮಣ, ದಲಿತ ಯುವತಿ ಕುಸುಮಳ ಅಪಹರಣ, ಗರೋಡಿಯ ಕಾಣಿಕೆ ಡಬ್ಬಿಯಿಂದ ಕಳುವು - ಇವು ಹಳ್ಳಿಯ ಅವನತಿಯನ್ನು ಸೂಚಿಸುತ್ತವೆ. ವ್ಯವಸ್ಥೆಯ ಪ್ರತಿನಿಧಿಗಳಾಗಿರುವ ಪೋಲಿಸರು, ಗರೋಡಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಮಲಕ್ಕನ 'ಪೋಸ್ಟ್ ಮಾರ್ಟಮ್' ಮಾಡಿಸುತ್ತಾರೆ. ಆದರೆ ಅವರು ಕುಸುಮಳನ್ನು ಪತ್ತೆಹಚ್ಚರೆಂಬ ಭರವಸೆ ಇಲ್ಲ. ದಲಿತ ಐತ, ಅಸಹಾಯಕನಾಗಿ ಊರು ಬಿಟ್ಟು ಹೋಗುತ್ತಾನೆ. ಕಾದಂಬರಿಯ ನಾಯಕ ಶಂಕರನ ದೃಷ್ಟಿಕೋನದ ತಂತ್ರವಿರುವ ಈ ಕೃತಿಯಲ್ಲಿ ಹಲವು ಧ್ವನಿಪೂರ್ಣ, ಸಾಂಕೇತಿಕ ವಿವರಗಳಿವೆ. ಕುಸುಮಳ ಅಪಹರಣವನ್ನು ಸೂಚಿಸುವ ಹದ್ದು - ಕೋಳಿಮರಿಯ ಸಂಕೇತ ಒಂದು ಒಳ್ಳೆಯ ಉದಾಹರಣೆ. ಎಂ. ಜಾನಕಿ ಅವರ 'ಕಪ್ಪುಗಿಡಿ' ಭೂಸುಧಾರಣೆಯಿಂದ ಉಂಟಾದ ಸಾಮಾಜಿಕ ಪರಿವರ್ತನೆಯನ್ನು ಧ್ವನಿಪೂರ್ಣವಾಗಿ (1988) ಚಿತ್ರಿಸುತ್ತದೆ.
ಸಂಕಲ ಕರಿಯ ಕೃಷ್ಣಸಾಲ್ಯಾನ್ರ 'ಚಂದ್ರಳ್ಳಿಡ್ ಬೊಳ್ಪಾಂಡ್', ಜಿತು ನಿಡ್ಲೆಯವರ 'ಮೂಜಂಜ ಆನಗ', ಮಾಧವ ಪೆರಾಜೆ ಅವರ 'ನಿಲೆ', ಕೆ. ಟಿ. ಗಟ್ಟಿ ಅವರ 'ಬೊಂಬಾಯಿದ ಇಲ್ಲ್', ಕುದ್ಕಾಡಿ ವಿಶ್ವನಾಥ ರೈ ಅವರ 'ಲೆಕ್ಕಸಿರಿ' (1994), ಪ. ರಾಮಕೃಷ್ಣ ಶಾಸ್ತ್ರಿಯವರ 'ಪುದ್ವಾರು' (1988), ಕಾತ್ಯಾಯಿನಿ ಕುಂಜಿಬೆಟ್ಟು - 'ಕಬರ್ಗತ್ತಲೆ' (2007) - ಇವು ಗಮನಾರ್ಹ ತುಳು ಕಾದಂಬರಿಗಳು. (ಡಿ. ಕೆ. ಚೌಟ ಅವರ 'ಮಿತ್ತ ಬೈಲ್ ಯಮುನಕ್ಕೆ', ಕಾತ್ಯಾಯಿನಿ ಕುಂಜಿಬೆಟ್ಟು ಅವರ 'ಕಬರ್ಗತ್ತಲೆ' ಕಾದಂಬರಿಗಳನ್ನು ಕುರಿತು ಈ ಬ್ಲಾಗ್ನಲ್ಲಿ ಪ್ರತ್ಯೇಕ ಲೇಖನಗಳು ಪ್ರಕಟವಾಗಲಿವೆ.)



No comments:

Post a Comment